ಆಜ್ಲಾನ್ ಶಾ ಹಾಕಿ: ಭಾರತಕ್ಕೆ ಕಂಚಿನ ಪದಕ
(PSG)
ಕೌಲಾಲಂಪುರ್(ಏಪ್ರಿಲ್ 12): ನಿನ್ನೆಯಷ್ಟೇ ಪ್ರಬಲ ಆಸ್ಟ್ರೇಲಿಯಾವನ್ನ ದಂಗುಗೊಳಿಸಿದ್ದ ಭಾರತ ತಂಡ ಇಂದು ದಕ್ಷಿಣ ಕೊರಿಯಾವನ್ನ ಸೋಲಿಸಿ ಸುಲ್ತಾನ್ ಆಜ್ಲಾನ್ ಶಾ ಹಾಕಿ ಟೂರ್ನಿಯಲ್ಲಿ 3ನೇ ಸ್ಥಾನ ದಕ್ಕಿಸಿಕೊಂಡಿದೆ. ಕಂಚಿನ ಪದಕ್ಕಾಗಿ ನಡೆದ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್'ನಲ್ಲಿ ದಕ್ಷಿಣ ಕೊರಿಯಾವನ್ನ ಭಾರತ 4-1 ಗೋಲುಗಳಿಂದ ಸೋಲಿಸಿತು. ತೀವ್ರ ಹಣಾಹಣಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಎರಡೂ ತಂಡಗಳು 2 ಗೋಲು ಗಳಿಸಿ ಸರಿಸಮಾನವಾಗಿದ್ದವು. ಪೆನಾಲ್ಟಿ ಶೂಟೌಟ್'ನಲ್ಲಿ ಭಾರತ ನಿರಾಯಾಸ ಗೆಲುವು ಸಾಧಿಸಿ ಕಂಚಿನ ಪದಕ ಗಳಿಸಿತು.
ಪಂದ್ಯದ ರೆಗುಲೇಶನ್ ಅವಧಿಯಲ್ಲಿ ಕೊಡಗಿನ ವೀರ ನಿಕಿಲ್ ತಿಮ್ಮಯ್ಯ ಮತ್ತು ಸತ್'ಬೀರ್ ಸಿಂಗ್ ಭಾರತದ ಪರ ಗೋಲು ಗಳಿಸಿದರು. ಪೆನಾಲ್ಟಿ ಶೂಟೌಟ್ ವೇಳೆ, ಆಕಾಶ್'ದೀಪ್ ಸಿಂಗ್, ಸರ್ದಾರ್ ಸಿಂಗ್, ರೂಪೀಂದರ್ ಪಾಲ್ ಸಿಂಗ್ ಮತ್ತು ಬಿರೇಂದ್ರ ಲಾಕ್ರಾ ಗೋಲು ಗಳಿಸಿದರು. ನಮ್ಮ ಗೋಲ್'ಕೀಪರ್ ಶ್ರೀಜೇಶ್ ದಿನದ ಹೀರೋ ಎನಿಸಿದರು. ಪೆನಾಲ್ಟಿ ಶೂಟೌಟ್'ನಲ್ಲಿ ಶ್ರೀಜೇಶ್ ಮೂರು ಗೋಲುಗಳನ್ನ ತಡೆದು ಭಾರತದ ಗೆಲುವಿಗೆ ಪ್ರಮುಖ ಕಾರಣರಾದರು.
ಈ ಟೂರ್ನಿಯಲ್ಲಿ ಭಾರತಕ್ಕಿದು ಹ್ಯಾಟ್ರಿಕ್ ಗೆಲುವಾಗಿದೆ. ಭಾರತ ತಂಡ ಈ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಕೆನಡಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಜಯಭೇರಿ ಭಾರಿಸಿತ್ತು.
ಇನ್ನು, ಟೂರ್ನಿಯ ಫೈನಲ್'ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೆಣಸಲಿವೆ.
Comments
Post a Comment