Social and Economic Survey will commence :SATURDAY ONWARDS
ಶನಿವಾರದಿಂದ ಜಾತಿ ಗಣತಿ
ಉದಯವಾಣಿ, Apr 05, 2015, 3:40 AM IST
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಹಾಗೂ ಬಹುಚರ್ಚಿತ ಸಾಮಾಚಿಕ- ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಗೆ ಕಡೆಗೂ ಅಧಿಕೃತ ಚಾಲನೆ ಸಿಗುವ ಮುಹೂರ್ತ ಸನ್ನಿಹಿತವಾಗಿದೆ. ಏ.11ರಿಂದ ರಾಜ್ಯಾದ್ಯಂತ ಮನೆ-ಮನೆ ಸಮೀಕ್ಷಾ ಕಾರ್ಯಕ್ಕೆ ಮಹೂರ್ತ ನಿಗದಿಯಾಗಿದೆ.
ಸಮೀಕ್ಷೆಗೆ ಪೂರ್ವಭಾವಿಯಾಗಿ ಕಳೆದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ನಡೆಸಿದ ಪ್ರಾಯೋಗಿಕ ಸರ್ವೇ ಬಹುತೇಕ ಯಶಸ್ವಿಯಾಗಿದ್ದು, ಆ ಸಂದರ್ಭದಲ್ಲಿ ಗಮನಕ್ಕೆ ಬಂದ ಕೆಲ ಲೋಪಗಳ ಬಗ್ಗೆ ಈಗಾಗಲೇ ಗಣತಿದಾರರಿಗೆ ತಿಳಿವಳಿಕೆ ನೀಡುವ ಕೆಲಸ ನಡೆದಿದೆ. ಜತೆಗೆ, ಎಲ್ಲಾ 1.33 ಲಕ್ಷ ಗಣತಿದಾರರ ತರಬೇತಿ ಕಾರ್ಯ ಪೂರ್ಣಗೊಂಡಿದೆ.
ಈ ಹಿನ್ನೆಲೆಯಲ್ಲಿ ಏ.11ರಿಂದ ಸಮೀಕ್ಷೆ ಆರಂಭಿಸಲು ನಿರ್ಧರಿಸಲಾಗಿದ್ದು, ಸಮೀಕ್ಷೆ ಏ.31ರವರೆಗೂ ಅಂದರೆ ಒಟ್ಟು 20 ದಿನ ನಡೆಯಲಿದೆ. ಪ್ರತಿಯೊಬ್ಬ ಗಣತಿದಾರನಿಗೆ 20 ದಿನಗಳಲ್ಲಿ 120 ಮನೆಗಳ ಸಮೀಕ್ಷೆ ಮಾಡುವ ಗುರಿ ನೀಡಲಾಗಿದೆ. ಆದರೆ ಪ್ರತಿ ದಿನ ಇಂತಿಷ್ಟು ಸಮಯ, ಇಷ್ಟೇ ಮನೆಗಳ ಸಮೀಕ್ಷೆ ಮಾಡಬೇಕು ಎಂದು ಆಯೋಗದಿಂದ ನಿಗದಿಪಡಿಸಲಾಗಿಲ್ಲ. ಗಣತಿದಾರರು ತಮ್ಮ ಅನುಕೂಲತೆ ಮತ್ತು ಸಮೀಕ್ಷೆಗೊಳಪಡುವ ಮನೆಯ ಸದಸ್ಯರ ಲಭ್ಯತೆ ಆಧರಿಸಿ ಸಮೀಕ್ಷಾ ಸಮಯವನ್ನು ಸ್ವತಃ ನಿಗದಿಪಡಿಸಿಕೊಳ್ಳುವ ಸ್ವಾತಂತ್ರ್ಯವನ್ನು ಆಯೋಗ ನೀಡಿದೆ. ಯಾರಾದರೂ ಗಣತಿದಾರರು 20 ದಿನಗಳೊಳಗಾಗಿ 120 ಮನೆಗಳ ಸಮೀಕ್ಷೆ ಪೂರ್ಣಗೊಳಿಸಿದರೆ ಅವರಿಗೆ
ಹೆಚ್ಚುವರಿ ಮನೆಗಳ ಸಮೀಕ್ಷೆಯ ಹೊಣೆ ವಹಿಸುವ ಅವಕಾಶವಿದೆ.
ಜಿಲ್ಲಾ ಉಸ್ತುವಾರಿ ಮಂತ್ರಿಗಳಿಂದ ಚಾಲನೆ?: ಏಪ್ರಿಲ್ 11ರಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ಸಮೀಕ್ಷೆ ಕಾರ್ಯ ಆರಂಭವಾಗಲಿದೆ. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡುವ ಬಗ್ಗೆ ಆಯೋಗ ಚಿಂತನೆ ನಡೆಸಿದೆ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿದ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಮೀಕ್ಷೆಗೆ ಬೇಕಾದ ಎಲ್ಲ ಮುದ್ರಣ ಸಾಮಗ್ರಿಗಳನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಿಕೊಡಲಾಗಿದೆ. ಪ್ರಚಾರ ವಾಹನಗಳು ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಪ್ರಚಾರ ಕಾರ್ಯ ಕೈಗೊಳ್ಳುತ್ತಿವೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜ್ "ಉದಯವಾಣಿ'ಗೆ ತಿಳಿಸಿದ್ದಾರೆ.
Comments
Post a Comment