ಜನಪ್ರಿಯ ಸಾಹಿತಿ ನಿಸಾರ್ ಅಹಮದ್ ಗೆ 'ರಾಷ್ಟ್ರಕವಿ' ಪಟ್ಟ. ನೀಡಲು ಸರ್ಕಾರದ ಚಿಂತನೆ

ಜನಪ್ರಿಯ ಸಾಹಿತಿ ನಿಸಾರ್ ಅಹಮದ್ ಗೆ 'ರಾಷ್ಟ್ರಕವಿ'
ಪಟ್ಟ
ಬೆಂಗಳೂರು, ಮೇ 31- ಹೆಸರಾಂತ ಸಾಹಿತಿ ಹಾಗೂ
ಜನಪ್ರಿಯ ಕವಿ ನಿಸಾರ್ ಅಹಮದ್ ಅವರಿಗೆ
ರಾಷ್ಟ್ರಕವಿ ಪಟ್ಟ ಕಟ್ಟಲು ಸರ್ಕಾರ
ಗಂಭೀರ ಚಿಂತನೆ ನಡೆಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
ತಮಗಿರುವ ವಿವೇಚನೆಯ ಅಧಿಕಾರ ಬಳಸಿ
ಶೀಘ್ರದಲ್ಲಿಯೇ ರಾಷ್ಟ್ರಕವಿ ಸ್ಥಾನಕ್ಕೆ
ನಿಸಾರ್ ಅಹಮದ್ ಅವರ ಹೆಸರನ್ನು ಅಧಿಕೃತವಾಗಿ
ಪ್ರಕಟಿಸಲಿದ್ದಾರೆ ಎಂದು ಉನ್ನತ ಮೂಲಗಳು
ತಿಳಿಸಿವೆ.
ರಾಷ್ಟ್ರಕವಿ ಪಟ್ಟವನ್ನು
ಅಲಂಕರಿಸಿದವರಲ್ಲಿ ಎಂ.ಗೋವಿಂದ
ಪೈ ಮೊದಲಿಗರು. ಆನಂತರ ಕವಿ
ಡಾ.ಕೆ.ವಿ.ಪುಟ್ಟಪ್ಪ (ಕುವೆಂಪು) ರಾಷ್ಟ್ರಕವಿ
ಪ್ರಶಸ್ತಿಗೆ ಭಾಜನರಾಗಿದ್ದರು. ಮೂರನೆಯವರಾಗಿ ಕವಿ
ಡಾ.ಜಿ.ಎಸ್.ಶಿವರುದ್ರಪ್ಪ ಅವರು
ರಾಷ್ಟ್ರಕವಿಯಾಗಿದ್ದರು.
ಜಿ.ಎಸ್.ಶಿವರುದ್ರಪ್ಪ ಅವರು ಇತ್ತೀಚೆಗೆ
ನಿಧನರಾಗಿರುವುದರಿಂದ ರಾಷ್ಟ್ರಕವಿ ಸ್ಥಾನ
ತೆರವಾಗಿದೆ. ತೆರವಾಗಿರುವ ಸ್ಥಾನಕ್ಕೆ ಸಾಹಿತಿ ಹೆಸರನ್ನು
ಶಿಫಾರಸು ಮಾಡಲು ಸರ್ಕಾರ ಹಿರಿಯ ಸಾಹಿತಿ
ಕೋ.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ
ಆಯ್ಕೆ ಸಮಿತಿಯನ್ನು ರಚಿಸಿತ್ತು. ಆದರೆ, ಈ ಸಮಿತಿ
ರಾಷ್ಟ್ರಕವಿ ಪಟ್ಟಕ್ಕೆ ಸಾಹಿತಿಗಳ ಹೆಸರನ್ನು ಶಿಫಾರಸು
ಮಾಡುವ ಬದಲು ರಾಷ್ಟ್ರಕವಿ ಪ್ರಶಸ್ತಿ
ನೀಡುವುದು ಸರಿಯಲ್ಲ. ಇದಕ್ಕೆ
ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬ
ವರದಿಯನ್ನು ನೀಡಿದೆ. ಪ್ರಶಸ್ತಿಗೆ ಯಾರ
ಹೆಸರನ್ನು ಕೂಡ ಶಿಫಾರಸು ಮಾಡಲಿಲ್ಲ.
ಹೀಗಾಗಿ ಸರ್ಕಾರವೇ ರಾಷ್ಟ್ರಕವಿ ಹೆಸರನ್ನು
ಅಂತಿಮಗೊಳಿಸಿ ಅಧಿಕೃತವಾಗಿ
ಪ್ರಕಟಿಸಲು ತೀರ್ಮಾನಿಸಿದೆ ಎಂದು
ಮೂಲಗಳು ತಿಳಿಸಿವೆ.
ರಾಷ್ಟ್ರಕವಿ ಪ್ರಶಸ್ತಿ ನೀಡುವುದು
ಸಂವಿಧಾನದಲ್ಲಿ ಇಲ್ಲ. ಅದೇ ರೀತಿ
ರಾಜ್ಯೋತ್ಸವ ಪ್ರಶಸ್ತಿ ನೀಡುವುದು ಕೂಡ
ಸಂವಿಧಾನದಲ್ಲಿಲ್ಲ ಎಂದು ಮೂಲಗಳು
ತಿಳಿಸಿವೆ. ಕಳೆದ ವರ್ಷ ನೀಡಿದ ಕನ್ನಡ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಲ್ಲಿ
ಕೋ.ಚನ್ನಬಸಪ್ಪ ಅವರು ಕೂಡ ಒಬ್ಬರಾಗಿದ್ದರು.
ಸಾಹಿತ್ಯ ವಲಯದಲ್ಲಿ ರಾಷ್ಟ್ರಕವಿ ಪ್ರಶಸ್ತಿ
ಕುರಿತಂತೆ ಭಿನ್ನ ಅಭಿಪ್ರಾಯವಿದೆ. ಇದುವರೆಗೂ
ರಾಜ್ಯದಲ್ಲಿ ನಡೆದುಬಂದಿರುವ
ಸಂಪ್ರದಾಯದಂತೆ ರಾಷ್ಟ್ರಕವಿ
ಪ್ರಶಸ್ತಿಯನ್ನು ಮುಂದುವರಿಸುವುದು ಸೂಕ್ತ
ಎಂಬುದು ಬಹುತೇಕ ಸಾಹಿತಿಗಳ ಅಭಿಪ್ರಾಯವಾಗಿದೆ.
ಈ ಸಂಬಂಧ ಸಾಹಿತಿಗಳ ವಲಯದಲ್ಲಿ
ಚರ್ಚೆಯೂ ನಡೆಯುತ್ತಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023