ಜಮಖಂಡಿ ಅಜ್ಜಿಯ ಬದನೆಗೆ ರಾಷ್ಟ್ರಪ್ರಶಸ್ತಿ!
ಉದಯವಾಣಿ, May 10, 2015, 3:40 AM IST
ಹುಬ್ಬಳ್ಳಿ: ಅಂತಾರಾಷ್ಟ್ರೀಯ ಬೀಜ ಕಂಪನಿಗಳು ಪುನರ್ಬಳಕೆ ಮಾಡಲಾಗದ ಹಾಗೂ ರೋಗನಿರೋಧಕ, ಕುಲಾಂತರಿ ತಳಿ ಹೆಸರಿನಲ್ಲಿ ಬಿತ್ತನೆ ಬೀಜಗಳ ಮೇಲೆ ಪಾರಮ್ಯ ಸಾಧಿಸುತ್ತಿರುವ ಸಮಯದಲ್ಲಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುಲ್ಯಾಳದ ಗುಡ್ಡದ ಸಾವಯವ ಕರಿಬದನೆ ದೇಶ-ವಿದೇಶಗಳಲ್ಲಿ ಬೀಜ ಕಂಪನಿಗಳಿಗೆ ಸಡ್ಡು ಹೊಡೆದಿದೆ.
ಹುಲ್ಯಾಳದ ರೈತ ಮಹಿಳೆ ಲಕ್ಷ್ಮೀಬಾಯಿ ಜುಲ್ಫಿ 50 ವರ್ಷಗಳ ಹಿಂದೆ ತಮ್ಮ ಹೊಲದ ಹತ್ತಿರ ಇದ್ದ ಗುಡ್ಡದ ಬಳಿ ಕಂಡ ಬದನೆಕಾಯಿ ತಂದು ಹೊಲದಲ್ಲಿ ನಾಟಿ ಮಾಡಿದ್ದರು. ತನ್ನ ಗಾತ್ರ ಹಾಗೂ ಸಿಹಿರುಚಿಯಿಂದಾಗಿ ಬೇಡಿಕೆ ಹೆಚ್ಚಿಸಿಕೊಂಡ ಈ ಗುಡ್ಡದ ಕರಿಬದನೆಯನ್ನು ವ್ಯಾಪಾರದ ಉದೇªಶಕ್ಕೆಂದು ಲಕ್ಷ್ಮೀಬಾಯಿ ಅವರ ಪುತ್ರ ರುದ್ರಪ್ಪ ಪ್ರಯೋಗಕ್ಕೆ ಒಳಪಡಿಸಿ ಸಾವಯವ ಕೃಷಿ ವಿಧಾನದಲ್ಲಿ ಬೆಳೆಯಲಾರಂಭಿಸಿದರು. ಇದರಿಂದ ಬದನೆ ಕಾಯಿ ಗಾತ್ರ, ಹೊಳಪು, ಬಣ್ಣ ಹಾಗೂ ರುಚಿಯಲ್ಲಿ ಇನ್ನಷ್ಟು ರೈತರನ್ನು ಆಕರ್ಷಿಸಿತು. ಅದು ಹಲ್ಯಾಳದಿಂದ ಚೀನಾದವರೆಗೂ ಹೆಸರು ಮಾಡಿತು.
ರಾಷ್ಟ್ರೀಯ ಗೌರವ: ಸ್ಥಳೀಯ ಬಿತ್ತನೆ ಬದನೆ ಬೀಜವನ್ನು ಉಳಿಸಿ ಬೆಳೆಸಿದ ಕಾರಣಕ್ಕಾಗಿ ರಾಷ್ಟ್ರೀಯ ತಳಮಟ್ಟದ ಸಂಶೋಧನೆ ಮತ್ತು ಸಂಪ್ರದಾಯ ಜ್ಞಾನ ಪ್ರಶಸ್ತಿಯನ್ನು ಮಾರ್ಚ್ 7ರಂದು ರಾಷ್ಟ್ರಪತಿಯವರು ಲಕ್ಷ್ಮೀಬಾಯಿ ಜುಲ್ಫಿ ಅವರಿಗೆ ನೀಡಿ ಗೌರವಿಸಿದರು.
ಎಕರೆಗೆ 40 ಟನ್ ಬದನೆ: ಬದನೆಯು ಸಾವಯವ ಕೃಷಿಯಲ್ಲಿ ಎಕರೆಗೆ 40 ಟನ್ ಇಳುವರಿ ಬರುತ್ತಿದ್ದು, ಪ್ರಯೋಗದ ಮೂಲಕ 10 ತರಹದ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಒಂದು ಗಿಡಕ್ಕೆ ಸುಮಾರು 55-60 ಕಾಯಿ ಬಿಡುತ್ತಿದೆ. ಒಂದು ಬದನೇಕಾಯಿ ಸರಿಸುಮಾರು 3 ಕೆಜಿ ತೂಕದಷ್ಟು ಬೆಳೆಯುತ್ತದೆ. ಆರು ತಿಂಗಳವರೆಗೆ ಇದು ಫಲ ನೀಡುತ್ತದೆ. ಪ್ರಸ್ತುತ ಬೇಸಿಗೆಯಲ್ಲಿ ಮಾತ್ರ ಇದನ್ನು ಬೆಳೆಯಲಾಗುತ್ತದೆ. ಈ ಬದನೆಗೆ ಹುಲ್ಯಾಳ ಜುಲ್ಫಿ ಕರಿ ಬದನೆ-1 (ಎಚ್ಝಡ್ಕೆಬಿ-1)ಎಂಬ ಹೆಸರು ಇರಿಸಲಾದ್ದು, ಪೇಟೆಂಟ್ ಪಡೆಯಲಾಗಿದೆ.
ಅಮರೇಗೌಡ ಗೋನವಾರ
Comments
Post a Comment