Published: 10 May 2015 01:59 PM IST
ಕಿಮ್ಮನೆ ರತ್ನಾಕರ
ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ಇಲಾಖೆ ಅಧಿಕಾರಿಗಳು, ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನಿರಂತರ ಸೇವೆಗೆ ತಡೆ ಹಾಕಲು ನಿರ್ಧರಿಸಿದೆ. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದೆ ಎಂಬ ಕಾರಣಕ್ಕೆ ಶಿಕ್ಷಕೇತರ ಸಿಬ್ಬಂದಿ ವರ್ಗಾವಣೆಗೆ ನಿಯಮ ರೂಪಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಎರಡು ವರ್ಷಗಳ ಹಿಂದೆ ಹೇಳಿಕೆ ನೀಡಿದ್ದರು. ಕೊನೆಗೂ ಹೊಸ ವರ್ಗಾವಣೆ ನಿಯಮ ತರಲು ಸರ್ಕಾರ ನಿರ್ಧರಿಸಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಂದು ಕಚೇರಿಯಲ್ಲಿ ಗರಿಷ್ಠ 3 ವರ್ಷಗಳ ಕಾಲ ಸೇವೆ ಸಲ್ಲಿಸಬಹುದು. ಆದರೆ ಜಿಲ್ಲಾ ಉಪನಿರ್ದೇಶಕರು ಹಾಗೂ ತತ್ಸಮಾನ ಹುದ್ದೆ ಹೊಂದಿರುವ ಅಧಿಕಾರಿಗಳನ್ನು ಪ್ರತಿ 2 ವರ್ಷಕ್ಕೊಮ್ಮೆ ವರ್ಗ ಮಾಡಲೇಬೇಕು ಎಂದು ಸರ್ಕಾರ ಹೊರಡಿಸಿರುವ ಕರಡು ನಿಯಮದಲ್ಲಿ ಹೇಳಿದೆ. ಸರ್ಕಾರದ ಈ ನಿಯಮಕ್ಕೆ ಯಾವುದೇ ಆಕ್ಷೇಪಣೆಗಳಿದ್ದರೆ ಮೇ 15ರೊಳಗೆ ಲಿಖಿತವಾಗಿ ಸಲ್ಲಿಸಬಹುದಾಗಿದೆ.
ಶಿಕ್ಷಣ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗೆಯೇ ಸ್ವತಃ ಸಚಿವರೇ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನೋಡಿ
ಹೌಹಾರಿದ್ದರು. ತಾವೇ ದಾಳಿ ನಡೆಸಿ ಭ್ರಷ್ಟರನ್ನು ಹಿಡಿದಿದ್ದರು. ಇದಕ್ಕಾಗಿ ಅ„ಕಾರಿಗಳ ವರ್ಗಾವಣೆಗೆ ಪ್ರತ್ಯೇಕ ನಿಯಮದ ಅಗತ್ಯವಿದೆ ಎಂದು ಸಚಿವರು
ವಿಧಾನಸಭೆಯಲ್ಲೂ ಹೇಳಿದ್ದರು. ಇದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ಅಧಿಕಾರಿಗಳ ನಿರಂತರ ವರ್ಗಾವಣೆಗೆ ಸಮ್ಮತಿ ನೀಡಿ ನಿಯಮ ರೂಪಿಸಲಾಗಿದೆ.
ಕರಡು ನಿಯಮದಲ್ಲೇನಿದೆ?: ರಾಜ್ಯದ ಲ್ಲಿರುವ ಎಲ್ಲ 204 ಬಿಇಒ ಕಚೇರಿಗೆ ಅನ್ವಯ ವಾಗುವಂತೆ ಶಿಕ್ಷಕರ ವರ್ಗಾವಣೆಯಂತೆ ಪ್ರತಿ 3 ವರ್ಷಕ್ಕೊಮ್ಮೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ. ಹಾಗೆಯೇ ಜಿಲ್ಲಾ ಉಪನಿರ್ದೇಶಕರು, ಉಪ ನಿರ್ದೇಶಕರು, ಡಯಟ್ ಹಿರಿಯ ಉಪನ್ಯಾಸಕರು, ಸಿಟಿಇ ಉಪನ್ಯಾಸಕರು ಮತ್ತು ಪ್ರಾಂಶುಪಾಲರು, ಡಯಟ್ ಉಪ ನಿರ್ದೇಶಕರು ಹಾಗೂ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ತತ್ಸಮಾನ ಸಿಬ್ಬಂದಿಯನ್ನು ಪ್ರತಿ 2 ವರ್ಷಕ್ಕೊಮ್ಮೆ ವರ್ಗಾವಣೆ ಮಾ ಡಲಾಗುತ್ತದೆ. ಈ ವರ್ಗಾವಣೆಯು ಆನ್ಲೈನ್ ಕೌನ್ಸೆಲಿಂಗ್ ಮೂಲಕ ನಡೆಯಲಿದ್ದು, ಜ್ಯೇಷ್ಠತೆ ಹಾಗೂ ಪ್ರಾದೇಶಿಕವಾರು ವರ್ಗಾವಣೆ ನಡೆಯಲಿದೆ. ಯಾವುದೇ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಅವರ ತವರು ಜಿಲ್ಲೆಗೆ ವರ್ಗಾವಣೆ ಮಾಡುವಂತಿಲ್ಲ. ಇದಲ್ಲದೇ ಯಾವುದಾದರೂ ಸಿಬ್ಬಂದಿ ಕಾರ್ಯಕಾರಿ ಹುದ್ದೆಯಲ್ಲಿ ಅತಿ ಹೆಚ್ಚು ಸೇವೆ ಮಾಡಿದ್ದರೆ ಅವರನ್ನು ಮತ್ತೆ ಕಾರ್ಯಕಾರಿ ಹುದ್ದೆಗೆ ವರ್ಗಾಯಿಸುವಂತಿಲ್ಲ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ನಿರಂತರ ವರ್ಗಾವಣೆ ಹೊರತುಪಡಿಸಿ ಆರೋಗ್ಯ ಹಾಗೂ ಪತಿ-ಪತ್ನಿ ಪ್ರಕರಣದಲ್ಲಿಯೂ ವಿಶೇಷ ಎಂದು ಪರಿಗಣಿಸಿ ಕೌನ್ಸೆಲಿಂಗ್ನಲ್ಲಿ ಮಾನ್ಯ ಮಾಡಬಹುದಾಗಿದೆ. ಒಂದೊಮ್ಮೆ ಈ ವರ್ಗಾವಣೆ ಪ್ರಕ್ರಿಯೆಯಲ್ಲಿ ರಾಜಕೀಯ ಪ್ರಭಾವ ಬೀರುವ ಅಥವಾ ನಿಯಮ ಬಾಹಿರ ಚಟುವಟಿಕೆ ನಡೆಸಲು ಮುಂದಾದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಯಾವುದೇ ಆಕ್ಷೇಪಣೆಗಳಿದ್ದರೆ ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ, ಬಹುಮಹಡಿ ಕಟ್ಟಡ-560001ಕ್ಕೆ ಬರೆಯಬಹುದಾಗಿದೆ.
Comments
Post a Comment