ಪ್ರಸ್ತುತ: ಶಿಕ್ಷಕರಿಗೆ ‘ಭಾರ’ವಾದ ಸಾಮಾಜಿಕ ಹೊರೆ


Jun 10, 2015, 04.56AM IST
* ಪ್ರಸ್ತುತ: ಲಕ್ಷ್ಮೀಕಾಂತ
ಮಿರಜಕರ

ಎಲ್ಲಿಯೂ ಉದ್ಯೋಗ ಸಿಗದವರು ಶಿಕ್ಷಣ ಕ್ಷೇತ್ರ ಪ್ರವೇಶಿಸು ತ್ತಾರೆ, ಅದು ವೃತ್ತಿ ಪ್ರೀತಿಯಿಂದ ಅಲ್ಲ,ಉದರನಿಮಿತ್ತಂ ಮಾತ್ರ-ಎಂಬುದು ಸಾರ್ವಜನಿಕರಿಂದ ಕೇಳಿ ಬರುವ ಮಾತು.
ಇಂದು ಪರಿಸ್ಥಿತಿ ಹೀಗಿಲ್ಲ. ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿಯೇ ಈಗ ಕೆಲಸ ಪಡೆಯುತ್ತಾರೆ. ಇಂದು ಸಂಬಳ, ಭತ್ಯೆ ತಪ್ತಿಕರವಾಗಿವೆ. ಶಿಕ್ಷಕ ವೃತ್ತಿ ನೀರಸವಾದುದಲ್ಲ.
ಅದೊಂದು ಸಜೀವ ಕಾರಂಜಿ. ನಿರ್ಭಾವ ಕಡತಗಳ ಮಧ್ಯೆ ಕುಳಿತು ಕೆಲಸ ಮಾಡುವುದಕ್ಕೂ, ಚಿಗುರೆಲೆಗಳ ಮಧ್ಯೆ ಮಕ್ಕಳ ಭವಿಷ್ಯ ನಿರ್ಮಾಣ ದಲ್ಲಿ ತೊಡಗುವುದಕ್ಕೂ ಅಜಗಜಾಂತರ ವ್ಯತ್ಯಾಸ. ಆದರೆ ಶಿಕ್ಷಕರು ಪಾಠ ಮಾಡುವುದನ್ನು ಬಿಟ್ಟು ಅಥವಾ ಅದನ್ನು ನಿರ್ವಹಿಸುತ್ತಲೇ ಬೇರೆ ಬೇರೆ ಕೆಲಸಗಳತ್ತ ಗಮನ ಹರಿಸ ಬೇಕು. ಶಿಕ್ಷಕನಾಗಿ ನೇಮಕವಾಗುವ ವ್ಯಕ್ತಿಯ ಹೆಗಲಿಗೆ ಹಲವು ಜವಾಬ್ದಾರಿಗಳು ಏರುತ್ತವೆ. ಅವರಿಗೆ ಯೋಜನಾ ಹೊರೆ ಜಾಸ್ತಿ ಯಾಗಿದೆ. ಜತೆಗೆ ಕಾಲಕಾಲಕ್ಕೆ ಇಲಾಖಾಧಿಕಾರಿಗಳು ಬೇಡುವ ವರದಿಗಳನ್ನು ಸಮಯದ ಪರಿಮಿತಿಯೊಳಗೆ ನೀಡುತ್ತಾ, ಶಿಕ್ಷಣದ ಗುಣಮಟ್ಟ ಕಾಯ್ದು
ಕೊಳ್ಳುವ ಸವಾಲು ಅವರ ಎದುರಿಗೆ ಇರುತ್ತದೆ.
ಶೈಕ್ಷಣಿಕ ವರ್ಷದ ಆರಂಭದಿಂದಲೇ ಅಕ್ಷರ ದಾಸೋಹ, ಪ್ರತಿಭಾ ಕಾರಂಜಿ,
ಕ್ರೀಡಾಕೂಟ, ಶಾಲಾ ಕಟ್ಟಡ ನಿರ್ಮಾಣ, ಗೈರು
ಹಾಜರಾತಿ ಆಂದೋಲನ, ಸಮುದಾಯದತ್ತ ಶಾಲೆ, ಜನಗಣತಿ, ಮಕ್ಕಳ ಗಣತಿ, ಆರ್ಥಿಕ ಗಣತಿ,ಆನೆಕಾಲು ರೋಗದ ಸಮೀಕ್ಷೆ ಹಾಗೂ ಕಬ್ಬಿಣಾಂಶ ಹೊಂದಿರುವ ಗುಳಿಗೆಗಳ ವಿತರಣೆ, ಮತದಾರರ ಪಟ್ಟಿ ಪರಿಷ್ಕರಣೆ (ಇದು ರಾಜಕೀಯ ಮನ್ವಂತರಕ್ಕೆ ತಕ್ಕಂತೆ ವರ್ಷಕ್ಕೆ ಎರಡು ಮೂರು ಸಲ).ಕಂದಾಯ ಇಲಾಖೆ ಮಾಡಬೇಕಾದ ಕೆಲಸ ಶಿಕ್ಷಕರ ಹೆಗಲಿಗೆ. ಹೀಗೆ ವರ್ಷವಿಡೀ ಬಿಡುವಿಲ್ಲದಂತೆ ಶಿಕ್ಷಕ ಪಾಲ್ಗೊಂಡರೆ ಅದೆಷ್ಟರ ಮಟ್ಟಿಗೆ ಮಕ್ಕಳಿಗೆ ಪಾಠ ಹೇಳಿಕೊಡುವುದು ಸಾಧ್ಯ? ಶೈಕ್ಷಣಿಕ ಗುಣಮಟ್ಟ ಕಾಯ್ದು ಕೊಳ್ಳುವುದು ಹೇಗೆ? ಶಿಕ್ಷಕರಿಗೆ ಶಿಕ್ಷಣ ಇಲಾಖೆ ನೀಡುವ ತರಬೇತಿಗಳ ಪಟ್ಟಿ ನೋಡ ಬೇಕು. ಜೀವನ ವಿಜ್ಞಾನ, ಆಂಗ್ಲಭಾಷಾ ತರಬೇತಿ, ಚೈತನ್ಯ ತರಬೇತಿ-1,2,3, ನಲಿಕಲಿ, ರಂಗಕಲೆ, ಕ್ರಿಯಾಸಂಶೋಧನೆ, ವಿಷಯಸಂಪದೀಕರಣ, ಗಣಕ ತರಬೇತಿ, ಉಪಗ್ರಹ ಆಧಾರಿತ ತರಬೇತಿ, ಮೌಲ್ಯಾಂಕನ, ಮಾಹಿತಿಸಿಂಧು, ಲಿಂಗ ಸಮಾನತೆ. ಚಿಣ್ಣರ ಅಂಗಳ-ಹೀಗೆಯೆ ತರಬೇತಿಗಳ ಪಟ್ಟಿ ಬೆಳೆಯುತ್ತದೆ. ಶಿಕ್ಷಕರನ್ನು ವರ್ಷದಲ್ಲಿ 20 ದಿನ ಉಚಿತ ತರಬೇತಿಗೆ ಒಳಪಡಿಸ ಬೇಕು ಎನ್ನುವ ನಿಯಮವನ್ನು ಇದು ಮೀರುತ್ತದೆ. ತರಬೇತಿಗೆ ಶಿಕ್ಷಕರನ್ನು ಆಯ್ಕೆ ಮಾಡುವುದಕ್ಕೆ ಯಾವುದೇ ವೈಜ್ಞಾನಿಕ ಮಾನ ದಂಡವಿಲ್ಲ. ಆಸಕ್ತಿ, ಅಭಿರುಚಿಗಳು ಪರಿಗಣನೆಗೆ ಬರುವುದಿಲ್ಲ. ಔಷಧ ಕೊಟ್ಟರೆ, ರೋಗ ವಾಸಿಯಾಗುತ್ತದೆಂಬ ಮನೋಧರ್ಮ ದಲ್ಲೇ, ತರಬೇತಿ ಕೊಟ್ಟರೆ ಶೈಕ್ಷಣಿಕ ಗುಣಮಟ್ಟ ಹೆಚ್ಚುತ್ತದೆ ಎನ್ನುವ ನಂಬಿಕೆ. ಇಲ್ಲಿ ಪ್ರಯೋಗವಷ್ಟೇ ಮುಖ್ಯ, ಫಲಿತಾಂಶವಲ್ಲ. ಮುಖ್ಯೋ ಪಾಧ್ಯಾ ಯರು ಸಹ ಒಬ್ಬ ಶಿಕ್ಷಕನಿಗೆ ತರಬೇತಿಗಳ ಪುನರಾವರ್ತನೆಯಾಗದಂತೆ ಎಚ್ಚರವಹಿಸಬೇಕು. ಇಂಥ ಒತ್ತಡ ಖಾಸಗಿ ಶಾಲೆಗಳ ಶಿಕ್ಷಕರಿಗಿಲ್ಲ. ಅವರು ನಿಗದಿತ ಅವಧಿಯಲ್ಲಿ ಪಾಠ ಪೂರ್ಣಗೊಳಿಸಿದರಾಯಿತು. ಬೇರೆ ಕೆಲಸಗಳ ತಂಟೆ, ತಕರಾರುಗಳಿಲ್ಲ. ಅಲ್ಲಿ ಹೋಗುವ ಮಕ್ಕಳೆಲ್ಲಾ ಸುಶಿ ಕ್ಷಿತ ಕುಟುಂಬದ ಜಾಣ ಮಕ್ಕಳೇ. ಶಿಕ್ಷಕರು ಕೊಟ್ಟ ಮನೆಗೆಲಸ ಮಾಡಿಸುವುದು, ಓದು, ಬರಹದ ವಿಷಯದಲ್ಲಿ ಮಕ್ಕಳನ್ನು ತರಾಟೆಗೆ ತೆಗೆದುಕೊಂಡು ಶಿಕ್ಷಕರ ಅರ್ಧ ಜವಾಬ್ದಾರಿಗೆ ಹೆಗಲೆಣೆ ಯಾಗುವ ವರು ಪಾಲಕರು. ಆದರೆ ಸರಕಾರಿ ಶಾಲೆಗಳ ರೀತಿಯೇ ಬೇರೆ. ಸರಕಾರಿ ಶಾಲೆಗಳೆಂದರೆ ಬಡವರ ಶಾಲೆ. ಮನೆಗೆಲಸ, ಹೊಲದ ಕೆಲಸಗಳಲ್ಲಿ ಪಾಲಕರಿಗೆ ಆಸರೆಯಾಗಿ, ಇದಕ್ಕಾಗಿ ಶಾಲೆಯನ್ನು ತಪ್ಪಿಸುತ್ತ ಬರುವ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಿ ಅವರ ಫಲಿತಾಂಶ ಶೇ 70 ಅಥವಾ ಶೇ 80 ಬರುವಂತೆ ಮಾಡುವ ಶಿಕ್ಷಕರ ಪ್ರಯತ್ನ ಕಡಿಮೆ ಸಾಧನೆಯೆ ? ಇಂದು ಬಿಸಿ ಊಟ ಮಕ್ಕಳನ್ನು ಶಾಲೆಗೆ ಕರೆದು ತರುವಲ್ಲಿ ಯಶಸ್ವಿಯಾಗಿದೆ. ಆದರೆ ಈಗಿರುವ
ಹೊರೆಯ ಜತೆಗೆ ಊಟೋ ಪಚಾರದ
ಜವಾಬ್ದಾರಿ ಎಷ್ಟೋ ಶಿಕ್ಷಕರನ್ನು ಕಂಗಾಲು
ಮಾಡಿದೆ. ನಾವು ಪಾಠ ಮಾಡಬೇಕಾ? ಊಟ ಬಡಿಸಬೇಕಾ? ಆಹಾರ ಗುಣಮಟ್ಟಕ್ಕಾಗಿ ಪೋಷಕರಿಂದ ಸಹಿ ಮಾಡಿಸಬೇಕು. ಇದಕ್ಕೆ ಪ್ರತ್ಯೇಕ ದಾಖಲಾತಿ, ಹಾಜರಾತಿ ಹಾಕಬೇಕು. ಇವುಗಳ ಜತೆ ನಮ್ಮ ಆಡಳಿತ. ಈ ಗೋಜಲುಗಳ ಮಧ್ಯೆ ಶಿಕ್ಷಕ ಸಹನಾ ಮೂರ್ತಿ ಯಾಗಿ ಪಾಠ ಮಾಡಬೇಕು. ಲೆಸನ್ ಪ್ಲಾನ್, ವಾರ್ಷಿಕ ಯೋಜನೆ, ಕ್ರಿಯಾಯೋಜನೆ, ನಿರಂತರ ಪರಿಹಾರ ಬೋಧನೆ, ಮಾರ್ಕ್ಸ್ ರಿಜಿಸ್ಟರ್, ದಾಖಲಾತಿ ವಿವರ, ಶುಲ್ಕ ವಿವರ-ಮುಂತಾದ ಪ್ರವರಗಳ ಲೆಕ್ಕ ಮಾಡಬೇಕು.
ಗ್ರಂಥಾಲಯದ ಪುಸ್ತಕಗಳನ್ನು ಕೊಡುವ, ತೆಗೆದುಕೊಳ್ಳುವ, ಶಾಲಾ ಕಟ್ಟಡ ದುರಸ್ತಿ, ನಿರ್ಮಾಣಕ್ಕಾಗಿ ಶಿಕ್ಷಕರೇ ಟೆಂಡರ್ ಕರೆದು
ಕೊಟೇಶನ್ ಪಡೆದು ಕೆಲಸ ನಿರ್ವಹಿಸಬೇಕು.
ಮುಖ್ಯವಾಗಿ ಪ್ರಾಥಮಿಕ ಶಾಲೆಗಳಲ್ಲಿ ಸ್ವಚ್ಛತೆಗೆ
ಜನ ಇಲ್ಲ. ಅಟೆಂಡರ್ಗಳಿಲ್ಲ. ಶಾಲೆಗಳಲ್ಲಿ ನಡೆಸುವ ವಲಯ, ತಾಲೂಕು, ಜಿಲ್ಲಾಮಟ್ಟದ ಕ್ರೀಡೆಗಳು, ವಿಜ್ಞಾನ ವಸ್ತು ಪ್ರದರ್ಶನ ಮುಂತಾದ ವುಗಳಿಗಾಗಿ ಲಕ್ಷ ಮೊತ್ತದ ಹಣ ಬೇಕು. ಇದರ ಸಂಗ್ರಹಣೆಗಾಗಿ ಶಾಲಾ ಅವಧಿಯ ನಂತರ ದಾನಿಗಳನ್ನು ಅರಸಿಕೊಂಡು
ತಿರುಗಾಟ. ಇಂಥ ಕಾರ್ಯ ಕ್ರಮಗಳು
ಮುಗಿಯುವವರೆಗೆ ಕುಟುಂಬದ ಕಡೆಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಈಗಂತೂ ಶಿಕ್ಷಕ,ಸೇವಕ, ಸಂಘಟಕನಾಗಿರಬೇಕು. ಆಡಳಿತ,ಶೈಕ್ಷಣಿಕ, ಶಿಕ್ಷಣೇತರ ಚಟುವಟಿಕೆಗೆ ತಲೆಕೊಡಬೇಕು. ಐ.ಟಿ, ಬಿ.ಟಿಯಂತೆ ಔದ್ಯೋಗಿಕ ಆಕರ್ಷಣೆ ಇಲ್ಲದೆ ಇರುವುದರಿಂದ ಎಲ್ಲೂ ಕೆಲಸ ಸಿಗದವರು ಇಲ್ಲಿಗೆ ಬರ್ತಾರೆ ಎನ್ನುವ ಅನಾದರ ಮಾತುಗಳನ್ನು ಸಹಿಸಬೇಕು. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪಾಠ ಮಾಡುವುದನ್ನು ಬಿಟ್ಟರೆ ಶಿಕ್ಷಕರಿಗೆ ಯಾವ ಕೆಲಸವೂ ಇರಲಿಲ್ಲ. ಈಗ ಇಡೀ ಸಮುದಾಯದ ಒಂದು ಭಾಗವಾಗಿ, ಬೋಧನೆಯೊಂದಿಗೆ ಜನ ಜಾಗೃತಿ ಉಂಟು ಮಾಡುವ ಕೆಲಸದಲ್ಲೂ ತೊಡಗಬೇಕಾದ ಜವಾಬ್ದಾರಿ ಇದೆ. ಮೇಲಿಂದ ಮೇಲೆ ಬದಲಾಗುತ್ತಿರುವ ಪರೀಕ್ಷಾ ಪದ್ದತಿಗೆ ಮಕ್ಕಳನ್ನು ಅಣಿಗೊಳಿಸುವುದು, ಜೂನ್ ತಿಂಗಳಲ್ಲಿ ಸೇತುಬಂಧ ಮಾಡಿ ಜುಲೈ ತಿಂಗಳಿನಿಂದ ಪಾಠ ಪ್ರಾರಂಭಿಸಬೇಕು.ಸೆಪ್ಟೆಂಬರ್ನಲ್ಲಿಯ ಅರ್ಧವಾರ್ಷಿಕ ಪರೀಕ್ಷೆ ಬಂದು ನಿಲ್ಲುವ ವೇಳೆಗೆ ಹೇಗಾದರೂ ಮಾಡಿ ಅರ್ಧ ಸಿಲಬಸ್ ಮುಗಿಸಿ ರಬೇಕು.ಇವತ್ತಿನ ಇಲಾಖೆಯ ಎಲ್ಲಾ ಆದೇಶಗಳು ಬರುವುದು ದೂರವಾಣಿಯ ಮೂಲಕ. ಶಾಲೆ ಪ್ರಾರಂಭದ ಸಮಯಕ್ಕೆ ಮಾಹಿತಿ ಕೇಳಿದರೆ ಶಾಲೆ ಬಿಡುವುದರೊಳಗಾಗಿ ಮಾಹಿತಿ ತಲುಪಬೇಕು. ಈಗ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅಡಿ ಯಲ್ಲಿ ಗ್ರಾಮನೈರ್ಮಲ್ಯ ಯೋಜನೆ, ಕುಡಿಯುವ ನೀರಿನ ಸ್ವಚ್ಛತೆ, ಶೌಚಾಲಯದ ಸ್ವಚ್ಛತೆ ಕಡೆಗೂ
ಲಕ್ಷ್ಯವಹಿಸಬೇಕು. ವಿಚಿತ್ರದ ಸಂಗತಿಯೆಂದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೌಚಾಲಯ, ಮೂತ್ರಾಲಯಗಳ ಉಪಯೋಗ, ಬಳಕೆಯ ಬಗ್ಗೆಯೂ ಹೇಳಿಕೊಡಲೇಬೇಕಾದ ಸ್ಥಿತಿ
ಶಿಕ್ಷಕರಿಗಿದೆ. ಶಾಲೆಗಳಿಗೆ ಕಾಂಪೌಂಡ್
ಇಲ್ಲದಿದ್ದರಂತೂ ಪಾಠ ಮಾಡುವುದರ ಜತೆಗೆ ಶಾಲಾ ಕಟ್ಟಡದ ರಕ್ಷಣೆಯ ಕಡೆಗೆ ಮುತುವರ್ಜಿ ವಹಿಸುವುದು ಶಿಕ್ಷಕರ ಹೊಣೆ. ವರ್ಷದಲ್ಲಿ ಸಿಗುವ 220 ಕೆಲಸದ ದಿನಗಳಲ್ಲಿ 15 ದಿನ ಸಾಂದರ್ಭಿಕ ರಜೆಗೆ, 4 ದಿನ ಸ್ಥಳೀಯ ರಜೆಗೆ, 2 ದಿನ ಪರಿ ಮಿತ ರಜೆಗೆ ಕಳೆದರೆ ಉಳಿದ ದಿನಗಳಲ್ಲಿ ಮೇಲೆ ಹೇಳಿದ ಎಲ್ಲಾ ಕೆಲಸಗಳಲ್ಲಿ
ತೊಡಗಿಸಿಕೊಂಡು ಗುಣಮಟ್ಟ ಕಾಯ್ದುಕೊಳ್ಳು ವುದು ಶಿಕ್ಷಕರ ಜವಾಬ್ದಾರಿ. ಆದರೆ ಶಿಕ್ಷಕರು
'ರಾಜಕೀಯ ಮಾಡು ತ್ತಾರೆ, ಅವರು ಮಕ್ಕಳಿಗೆ
ಕಲಿಸದಿದ್ದರೂ ಪಗಾರ ಬರುತ್ತದೆ' ಎಂಬುದೇ
ಸಾರ್ವಜನಿಕರ ಅಭಿಪ್ರಾಯ. ಈ ಅಭಿಪ್ರಾಯ ಬದಲಾಗುವು ದೆಂದು? ಈ ಅಭಿಪ್ರಾಯ
ಬದಲಾಗದಿರಬಹುದು. ಶಿಕ್ಷಕರ ಕೆಲಸವಂತೂ
ಬದಲಾಗದು. ಮತ್ತೆ ಶಾಲೆಗಳು ಬಾಗಿಲು ತೆರೆದಿವೆ. ಅದೇ ಕೆಲಸ ಕಾಯ್ದು ಕುಳಿತಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023