ಭಾರತದ ಸಂಜೀವ್ ಚತುರ್ವೇದಿ ಮತ್ತು ಅಂಶು ಗುಪ್ತಾ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ
ಮನಿಲಾ (ಐಎಎನ್ಎಸ್): ಭ್ರಷ್ಟಾಚಾರ ವಿರುದ್ಧದ ಹೋರಾಟಗಾರ, ಸಂಜೀವ್ ಚತುರ್ವೇದಿ ಹಾಗೂ ‘ಗೂಂಜ್’ ಸ್ವಯಂಸೇವಾ ಸಂಸ್ಥೆ ಸಂಸ್ಥಾಪಕ ಅಂಶು ಗುಪ್ತಾ ಅವರಿಗೆ ಸೋಮವಾರ ಪ್ರತಿಷ್ಠಿತ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಫಿಲಿಪ್ಪೀನ್ಸ್ ಅಧ್ಯಕ್ಷ ಬೆನಿಗ್ನೊ ಸಿಮೆನ್ ಕೋಜುಅನೊಕೊ ಅಕ್ವಿನೊ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚತುರ್ವೇದಿ, ‘ಏಷ್ಯಾದ ಇತರ ಅಭಿವೃದ್ಧಿಶೀಲ ರಾಷ್ಟ್ರಗಳಂತೆ ಭಾರತವೂ ಕೂಡಾ ಭ್ರಷ್ಟಾಚಾರದಂಥ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಇನ್ನೂ ಸಾಧ್ಯವಾಗಿಲ್ಲ. ವ್ಯವಸ್ಥೆಯೊಳಗೆ ಇದ್ದುಕೊಂಡೇ ಭ್ರಷ್ಟಾಚಾರದ ವಿರುದ್ಧ ಹೋರಾಡುವಾಗ ನನಗೆ ಬಹು ಪ್ರಭಾವಶಾಲಿಗಳಿಂದಲೇ ತೀವ್ರ ವಿರೋಧ ವ್ಯಕ್ತವಾಯಿತು. ಆದರೆ ನಮ್ಮ ದೇಶದಲ್ಲಿನ ಸಾಂವಿಧಾನಿಕ ಮೌಲ್ಯಗಳಾದ ಶಾಸಕಾಂಗ, ನ್ಯಾಯಾಂಗ ಹಾಗೂ ಮಾಧ್ಯಮದ ಬೆಂಬಲದಿಂದಾಗಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡಲು ಸಾಧ್ಯವಾಯಿತು’ ಎಂದು ಹೇಳಿದರು.
‘ಭಾರತದಲ್ಲಿ 15ರಿಂದ 35 ವರ್ಷದೊಳಗಿರುವ ಯುವಜನರು ಭ್ರಷ್ಟಾಚಾರವನ್ನು ಬೇರುಸಮೇತ ಕಿತ್ತುಹಾಕಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಉತ್ಸುಕರಾಗಿದ್ದಾರೆ. ಯುವಜನರ ಈ ಉತ್ಸುಕತೆಯೇ ಭ್ರಷ್ಟಾಚಾರವನ್ನು ನಿರ್ಮೂಲನ ಮಾಡಲು ಸಹಕಾರಿಯಾಗಲಿದೆ ಎನ್ನುವ ವಿಶ್ವಾಸ ನನ್ನದು’ ಎಂದು ಸಂಜೀವ್ ಅಭಿಪ್ರಾಯ ವ್ಯಕ್ತಪಡಿಸಿದರು.
Comments
Post a Comment