ಜೀವಸತ್ವಗಳು ನಮಗೆ ಏಕೆ ಬೇಕು?


9 Dec, 2015
ಡಾ. ವೀಣಾ ಭಾಸ್ಕರ್
ಜೀವಸತ್ವಗಳು (ವಿಟಮಿನ್) ನಮ್ಮ
ದೇಹದ ವಿವಿಧ ಕಾರ್ಯಗಳಿಗೆ ಅತ್ಯವಶ್ಯಕವಾಗಿ
ಬೇಕಾದ ಅಂಶಗಳು. ನಾವು ಸೇವಿಸುವ ಆಹಾರದಲ್ಲಿನ
ಜೀವಸತ್ವಗಳು ಪಚನವಾಗಿ ರಕ್ತದಲ್ಲಿ
ಹೀರುವಂತಾಗಲು ಜಿಡ್ಡಿನಂಶದ
ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನು ಜಿಡ್ಡಿನಲ್ಲಿ
ಕರಗುವ ಮತ್ತು ನೀರಿನಲ್ಲಿ ಕರಗುವ
(Water Soluble)
ಜೀವಸತ್ವಗಳೆಂದು
ವಿಂಗಡಿಸಲಾಗಿದೆ.
ಜೀವಸತ್ವ ಎ.ಡಿ.ಇ.ಕೆ.ಗಳನ್ನು (ವಿಟಮಿನ್
ಎ,ಡಿ,ಇ,ಕೆ) ಜಿಡ್ಡಿನಲ್ಲಿ ಕರಗುವ
ಜೀವಸತ್ವಗಳೆಂದೂ, ಬಿ.
ಕಾಂಪ್ಲೆಕ್ಸ್
ಅನ್ನೊಳಗೊಂಡ
ಒಂಬತ್ತು ಜೀವಸತ್ವಗಳನ್ನು
ನೀರಿನಲ್ಲಿ ಕರಗುವ ಗುಂಪನ್ನಾಗಿಯೂ
ಹೆಸರಿಸಲಾಗಿದೆ.
ಜೀವಸತ್ವ 'ಎ' (Vitamin A)
ಹಾಲು, ಬೆಣ್ಣೆ, ಕೆನೆ, ಮೊಟ್ಟೆಯ
ಹಳದಿ, ಹಸಿರು ಮತ್ತು ಹಳದಿ/ಕೇಸರಿ ಬಣ್ಣದ ಹಣ್ಣು,
ತರಕಾರಿಗಳಾದ ಕ್ಯಾರೆಟ್, ಮಾವು, ಪಪ್ಪಾಯಿ,
ಕುಂಬಳಕಾಯಿಯಲ್ಲಿ ಹೇರಳವಾಗಿದ್ದು ನಮ್ಮ
ಕಣ್ಣಿನ ಆರೋಗ್ಯಕ್ಕೆ ಅತ್ಯವಶ್ಯ. ಕಣ್ಣಿನ
ದೃಷ್ಟಿ ಬಲಗೊಳ್ಳಲು, ಕತ್ತಲು ಮತ್ತು
ಬೆಳಕಿನಲ್ಲಿ ದೃಷ್ಟಿಯ ಸಮತೋಲನ ಕಾಪಾಡಲು
ಚರ್ಮದ ಮೇಲ್ಮೈ ಆರೋಗ್ಯಕರವಾಗಿ–
ಕಾಂತಿಯುಕ್ತವಾಗಿರಲು, ಗಂಡಸರಲ್ಲಿ
ಆರೋಗ್ಯಪೂರ್ಣ ವೀರ್ಯ
ಉತ್ಪಾದನೆಯಾಗಲು ಮತ್ತು ಅನ್ನನಾಳ, ವಾಯುನಾಳ,
ಮೂತ್ರನಾಳಗಳ ಆರೋಗ್ಯ ಕಾಪಾಡಲು 'ಎ'
ಜೀವಸತ್ವ ಮಹತ್ವದ ಪಾತ್ರ ವಹಿಸುತ್ತದೆ.
ದೇಹದಲ್ಲಿ ಈ ಜೀವಸ್ವತದ
ಕೊರತೆಯುಂಟಾದರೆ ಇರುಳು
ಗುರುಡು, ಎಚ್ಚರವಹಿಸದಿದ್ದರೆ
ದೃಷ್ಟಿಹೀನತೆಯೂ ತಲೆದೋರಬಹುದು. 'ಎ'
ಜೀವಸತ್ವದ
ಕೊರತೆಯಿಂದ ಅನ್ನ, ಮೂತ್ರ,
ವಾಯುನಾಳಗಳ ಸೋಂಕು,
ಕಾಂತಿಹೀನವಾದ ಚರ್ಮ ಮತ್ತು
ಅದಕ್ಕೆ ಸಂಬಂಧಪಟ್ಟ
ತೊಂದರೆಗಳಿಂದ
ನರಳುತ್ತಾರೆ.
ಜೀವಸತ್ವ 'ಡಿ' (Vitamin D)
'ಡಿ' ಜೀವಸತ್ವ ಹಾಲು, ಮೀನು,
ಮೊಟ್ಟೆಯ ಹಳದಿಯಲ್ಲಿ
ಹೇರಳವಾಗಿರುತ್ತದೆಯಾದರೂ, ಸೂರ್ಯನ ಕಿರಣಗಳು
ಚರ್ಮದ ಮೇಲೆ ಬೀಳುವುದರಿಂದ
ದೇಹದಲ್ಲಿ ಸಾಕಷ್ಟು ಉತ್ಪಾದನೆಯಾಗುತ್ತದೆ. ನಮ್ಮ
ದೇಹದಲ್ಲಿ ಕ್ಯಾಲ್ಷಿಯಂ ಪ್ರಮಾಣ ಕಾಪಾಡಲು,
ಮೂಳೆ ಮತ್ತು ಹಲ್ಲಿನ ಗಡುಸುತನ ಕಾಪಾಡುವಲ್ಲಿ 'ಡಿ'
ಜೀವಸತ್ವ ಅತ್ಯವಶ್ಯವಾಗಿದೆ.
ಜೀವಸತ್ವ 'ಇ' (Vitamin E)
ಸೊಪ್ಪು, ಕಾಯಿ/ಬೀಜ,
ತರಕಾರಿ, ಅಡುಗೆ ಎಣ್ಣೆ,
ಮೊಟ್ಟೆಯಲ್ಲಿ ಹೇರಳವಾಗಿದೆ.
ನಮ್ಮ ದೇಹದಲ್ಲಿ ನಡೆಯುವ ಹಲವಾರು ಪರಿವರ್ತನಾ
ಕ್ರಿಯೆಗಳಿಂದ ಉತ್ಪತ್ತಿಯಾಗುವ ವಿಷಕಾರಿ
ಅಂಶಗಳು ಜೀವಕಣಗಳಿಗೆ ಹಾನಿಮಾಡಿ
ಕ್ಯಾನ್ಸರ್ ಮತ್ತಿತರ ಮಾರಣಾಂತಿಕ
ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ
ಎಂಬುದು ಸಂಶೋಧನೆಗಳಿಂದ
ತಿಳಿದುಬಂದಿದೆ. 'ಇ' ಜೀವಸತ್ವ
ಎಲ್ಲ ಜೀವಕಣ ಮತ್ತು
ಅಂಗಗಳನ್ನು ಈ ವಿಷಕಾರಿ
ಅಂಶಗಳಿಂದ ರಕ್ಷಿಸಲು ಸಹಾಯ
ಮಾಡುತ್ತದೆ ಎಂದು ದೃಢಪಟ್ಟಿದೆ.
ಆದ್ದರಿಂದ ನಮ್ಮ ಆಹಾರದಲ್ಲಿ 'ಇ'
ಜೀವಸತ್ವ ಹೇರಳವಾಗಿರುವ ಹಣ್ಣು–ತರಕಾರಿ
ಸೇವನೆಯಿಂದ ಈ ವಿಷಕಾರಕ ಅಂಶಗಳನ್ನು
ನಿಯಂತ್ರಣದಲ್ಲಿಡಬಹುದೆಂದು
ಸಾಬೀತಾಗಿದೆ.
ಜೀವಸತ್ವ 'ಕೆ' (Vitamin K)
ಸೊಪ್ಪು, ಕ್ಯಾಬೇಜ್, ಹೂಕೋಸು,
ಮೊಟ್ಟೆಯ ಹಳದಿಯಲ್ಲಿ
ಹೇರಳವಾಗಿರುವ ಈ ಜೀವಸತ್ವ, ನಮ್ಮ
ದೊಡ್ಡ ಕರುಳಿನಲ್ಲಿರುವ ನಿರುಪದ್ರವಿ
ರೋಗಾಣು ಗಳಿಂದಲೂ ಯಥೇಚ್ಛವಾಗಿ
ಉತ್ಪಾದಿಸಲ್ಪಡುತ್ತದೆ. 'ಕೆ' ಜೀವಸತ್ವ,
ಪೆಟ್ಟಾದ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿ,
ತೀವ್ರ ರಕ್ತಸ್ರಾವವಾಗುವುದನ್ನು
ತಡೆಗಟ್ಟಲು ಅತ್ಯವಶ್ಯ.
ನೀರಿನಲ್ಲಿ ಕರಗುವ
ಜೀವಸತ್ವಗಳು (Water Soluble
Vitamin): ಈ ಗುಂಪಿನಲ್ಲಿ 'ಬಿ'
ಕಾಂಪ್ಲೆಕ್ಸ್
ಅನ್ನೊಳಗೊಂಡ
ಒಂಬತ್ತು ವಿವಿಧ ಜೀವಸತ್ವಗಳಿವೆ.
ಜೀವಸತ್ವ 'ಬಿ1' (ಥೈಮಿನ್/Thiamine):
'ಬಿ1' ಜೀವಸತ್ವ ಪಾಲಿಷ್ ಮಾಡದ ಅಕ್ಕಿ,
ಕಾಳುಗಳಲ್ಲಿ ಯಥೇಚ್ಚವಾಗಿದ್ದು, ನಮ್ಮ
ಆಹಾರದಲ್ಲಿನ ಅಂಗಾರಕವನ್ನು (Car
bohydrates) ಶಕ್ತಿಯನ್ನಾಗಿ ಪರಿವರ್ತಿಸಲು ಅತಿ
ಮುಖ್ಯ ಪಾತ್ರ ವಹಿಸುತ್ತದೆ. ಇದರ
ಕೊರತೆಯುಂಟಾದಾಗ 'ಬೆರಿ–ಬೇರಿ'
ಎಂಬ ಕಾಯಿಲೆ ತಲೆದೋರುತ್ತದೆ ಮತ್ತು ರೋಗಿಗಳು
ಹೃದಯ, ನರಗಳಿಗೆ ಸಂಬಂಧಪಟ್ಟ
ದೌರ್ಬಲ್ಯದಿಂದ ನರಳುತ್ತಾರೆ.
ಜೀವಸತ್ವ 'ಬಿ2)
(ರೈಬೊಫ್ಲೆವಿನ್/ Riboflavin):
ಮೊಟ್ಟೆ, ಮಾಂಸ, ಕಾಳು ಮತ್ತು
ಹಾಲಿನಲ್ಲಿ ಹೇರಳವಾಗಿರುವ 'ಬಿ2'
ಜೀವಸತ್ವ, ನಮ್ಮ ಆಹಾರದಲ್ಲಿನ
ಅಂಗಾರಕ ಮತ್ತು ಕೊಬ್ಬಿನ
ಅಂಶ ಶಕ್ತಿಯಾಗಿ ಪರಿರ್ತನೆ
ಗೊಳ್ಳಲು ಅತ್ಯವಶ್ಯ. ಈ
ಜೀವಸತ್ವದ
ಕೊರತೆಯುಂಟಾ ದಾಗ ಬಾಯಿ,
ತುಟಿ, ನಾಲಗೆಯಲ್ಲಿ ಹುಣ್ಣುಗಳಾಗುತ್ತವೆ ಮತ್ತು
ರೋಗಿಗಳು ಚರ್ಮಕ್ಕೆ ಸಬಂಧಪಟ್ಟ
ಕಾಯಿಲೆಗಳಿಂದಲೂ ನರಳುತ್ತಾರೆ.
ಜೀವಸತ್ವ 'ಬಿ3' (ನೈಯಾಸಿನ್/ Niacin):
ಬೇಳೆಕಾಳು, ಧಾನ್ಯಗಳು, ಹಾಲು, ಮಾಂಸದಲ್ಲಿ
ಹೇರಳವಾಗಿರುವ 'ಬಿ3' ಜೀವಸತ್ವ,
ಆಹಾರದಲ್ಲಿನ ಅಂಗಾರಕ,
ಕೊಬ್ಬು ಮತ್ತು
ಪ್ರೋಟೀನ್ಗಳ ಪರಿವರ್ತನೆಗೆ ಸಹಕಾರಿ. 'ಬಿ3'
ಜೀವಸತ್ವದ
ಕೊರತೆಯಾದಾಗ ಪರಿವರ್ತನಾ
ಕಾರ್ಯಗಳಿಗೆ ಧಕ್ಕೆಯುಂಟಾಗಿ, ದೇಹದಲ್ಲಿ
ಶಕ್ತಿಯ ಉತ್ಪಾದನೆ
ಕುಂಠಿತಗೊಳ್ಳುತ್ತದೆ. ಪರಿಣಾಮ
ರೋಗಿಗಳು ಚರ್ಮ, ನರಮಂಡಲ ಮತ್ತು
ಜೀರ್ಣಕ್ರಿಯೆಗೆ
ಸಂಬಂಧಪಟ್ಟ ಕಾಯಿಲೆಗಳಿಂದ
ನರಳುತ್ತಾರೆ.
ಜೀವಸತ್ವ 'ಬಿ6' (ಪೈರಿಡೋಕ್ಸಿನ್/
Pyridoxine): ಕಾಳು, ಮೊಟ್ಟೆ,
ಮಾಂಸ, ತರಕಾರಿಗಳಲ್ಲಿ ಹೇರಳ ವಾಗಿರುವ 'ಬಿ6'
ಜೀವಸತ್ವ ಆಹಾರದಲ್ಲಿನ
ಪ್ರೋಟೀನ್ ಗಳನ್ನು ಶಕ್ತಿಯನ್ನಾಗಿ
ಪರಿವರ್ತಿಸಲು ಸಹಾಯ ಮಾಡುತ್ತದೆ.
ಕೊರತೆಯುಂಟಾದಾಗ
ರಕ್ತಹೀನತೆ, ವಿಪರೀತ ಸುಸ್ತು,
ಕಿರಿಕಿರಿ, ಖಿನ್ನತೆ ತಲೆ ದೋರುತ್ತವೆ.
ಬಯೊಟಿನ್ (Biotin)
ಕಾಳು, ಬೀಜ ಮತ್ತು
ಮೊಟ್ಟೆಯಲ್ಲಿ ಹೇರಳವಾಗಿರುವ ಈ
ಜೀವಸತ್ವ ಆಹಾರದಲ್ಲಿನ
ಕೊಬ್ಬು ಮತ್ತು ಅಂಗಾರಕ ವನ್ನು
ಶಕ್ತಿಯನ್ನಾಗಿ ಪರಿವರ್ತಿಸಲು ಅವಶ್ಯ.
ಬಯೊಟಿನ್ನ
ಕೊರತೆಯುಂಟಾದಾಗ ತುಟಿ, ನಾಲಗೆ,
ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆಗಳು
ತಲೆ ದೋರುತ್ತವೆ ಮತ್ತು ರೋಗಿಗಳು
ಮಾಂಸಖಂಡಗಳ ನೋವು,
ಅಜೀರ್ಣ, ಖಿನ್ನತೆಯಿಂದ
ನರಳುತ್ತಾರೆ.
ಫೋಲಿಕ್ ಆಮ್ಲ (Folic acid): ಹಸಿರು ತರಕಾರಿ,
ಸೊಪ್ಪು, ಕಾಳುಗಳಲ್ಲಿ ಹೇರಳವಾಗಿದ್ದು
ರಕ್ತಕಣಗಳು ಮತ್ತು ನರಗಳ ಬೆಳವಣಿಗೆಯಲ್ಲಿ
ಮಹತ್ವದ ಪಾತ್ರ ವಹಿಸುತ್ತದೆ.
ಭ್ರೂಣಾವಸ್ಥೆಯಲ್ಲಿನ ಶಿಶುವಿನ ನರಗಳ
ಬೆಳವಣಿಗೆಯಲ್ಲಿ ಫೋಲಿಕ್ ಆಮ್ಲ ಅತಿ ಮಹತ್ವದ
ಪಾತ್ರ ವಹಿಸುತ್ತದಾದ್ದರಿಂದ ಗರ್ಭಿಣಿ
ಯಾಗಬಯಸುವವರಿಗೆ ಮತ್ತು ಗರ್ಭಧರಿಸಿದ
ಮೊದಲ ಮೂರು ತಿಂಗಳು ಈ
ಜೀವಸತ್ವವಿರುವ ಮಾತ್ರೆಗಳನ್ನು
ಅವಶ್ಯವಾಗಿ ನೀಡಲಾಗುತ್ತದೆ.
ಜೀವಸತ್ವ ಬಿ12 (Vitamin B12):
ಮೊಟ್ಟೆ, ಮಾಂಸ ಮತ್ತು
ಹಾಲಿನಲ್ಲಿ ಹೇರಳವಾಗಿದ್ದು, ರಕ್ತಕಣ ಮತ್ತು ನರಗಳ
ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಕೊರತೆಯುಂಟಾದರೆ
ರಕ್ತಹೀನತೆ, ಕೈ–ಕಾಲು (ಅಂಗೈ–
ಪಾದಗಳಲ್ಲಿ ಹೆಚ್ಚಾಗಿ) ಜೋಮು ಹಿಡಿಯುವುದು,
ಸ್ಪರ್ಶಹೀನತೆ, ನರಗಳ ದೌರ್ಬಲ್ಯ,
ವಿಪರೀತ ಕಿರಿಕಿರಿಯಿಂದ ರೋಗಿಗಳು
ನರಳುತ್ತಾರೆ.
ಜೀವಸತ್ವ 'ಸಿ' (Vitamin C/ ಆಸ್ಕಾರ್ಬಿಕ್
ಆಮ್ಲ): ಟೊಮೆಟೊ,
ಬೆಟ್ಟದ ನೆಲ್ಲಿ, ಕಿವಿಹಣ್ಣು, ಇನ್ನಿತರ ಹುಳಿ ಹಣ್ಣು
ಮತ್ತು ತರಕಾರಿಗಳಲ್ಲಿ ಹೇರಳವಾಗಿರುವ 'ಸಿ'
ಜೀವಸತ್ವ ಗಾಯವಾದಾಗ ಮೂಡುವ ಕಣದ
(Scar) ಬೆಳವಣಿಗೆ, ರಕ್ತನಾಳ ಮತ್ತು ಎಲುಬಿನ
ಗಡುಸುಗೊಳ್ಳುವಿಕೆಯಲ್ಲಿ ಮಹತ್ವದ
ಪಾತ್ರ ವಹಿಸುತ್ತದೆ.
ಕೊರತೆಯುಂಟಾದಾಗ ದವಡೆ/
ವಸಡಿನಲ್ಲಿ ರಕ್ತಸ್ರಾವ, ರಕ್ತಹೀನತೆ, ಕೈ–
ಕಾಲುಗಳಲ್ಲಿನ ಸಣ್ಣ ಧಮನಿಗಳು ಒಡೆದು ಮೂಡುವ
ಕಲೆಗಳು, ಕೀಲು–ಗಂಟುಗಳಲ್ಲಿ
ರಕ್ತಸ್ರಾವದಂತಹ ಸಮಸ್ಯೆಗಳಿಂದ
ನರಳುತ್ತಾರೆ. ಈ ಎಲ್ಲ ಲಕ್ಷಣಗಳಿಗೆ 'ಸ್ಕರ್ವಿ'
ಎಂದು ಹೆಸರು. ಈ ಎಲ್ಲ ಅಂಶಗಳನ್ನು
ಗಮನಿಸಿದಾಗ ಜೀವಸತ್ವಗಳು ನಮ್ಮ
ದೇಹಕ್ಕೆ ಎಷ್ಟು ಅವಶ್ಯಕವೆಂಬುದು
ತಿಳಿಯುತ್ತದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023