ಶಿಕ್ಷಕರ ತರಬೇತಿಗೆ ಬೇಕು ಕಾಯಕಲ್ಪ

 

Updated May 7, 2017, 10.17PM IST
ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಕ್ಕೆ ಅರ್ಹತೆ ಪಡೆಯುವ ಸಲುವಾಗಿ ನಡೆಸಲಾದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ಪರೀಕ್ಷೆಗೆ ಕುಳಿತ ಒಟ್ಟು 2.75 ಲಕ್ಷ ಅಭ್ಯರ್ಥಿಗಳ ಪೈಕಿ 14, 376 ಮಂದಿ ಮಾತ್ರ ಉತ್ತೀರ್ಣರಾಗಿದ್ದಾರೆ.

ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್‌ (ಎನ್‌ಸಿಟಿಇ) ಪಠ್ಯಕ್ರಮದ ಅನ್ವಯ ಟಿಇಟಿ ಪರೀಕ್ಷೆಯನ್ನು ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ನಡೆಸಲಾಗುತ್ತಿದೆ. ಇಡೀ ದೇಶದಲ್ಲಿ ಇದೇ ಪಠ್ಯಕ್ರಮವನ್ನು ಅನುಸರಿಸಿ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಲಾಗುತ್ತದೆ.
ಅಚ್ಚರಿಯೆಂದರೆ ಈ ಪರೀಕ್ಷೆಗಳಲ್ಲಿ ನಪಾಸು ಆಗಿರುವವರು ಶಿಕ್ಷಕರ ತರಬೇತಿ ಕೋರ್ಸ್‌ಗಳಾದ ಡಿ.ಎಡ್‌ ಮತ್ತು ಬಿ.ಇಡಿಗಳಲ್ಲಿ ಭಾರಿ ಅಂಕಗಳನ್ನೇ ಗಳಿಸಿರುತ್ತಾರೆ. ಒಟ್ಟಾರೆ ಈ ಪರೀಕ್ಷೆ ಫಲಿತಾಂಶದ ಅಂಕಿ ಅಂಶಗಳು ನಮ್ಮ ಶಿಕ್ಷಣ ವ್ಯವಸ್ಥೆಯ ಲೋಪಗಳನ್ನು ಬಟಾಬಯಲು ಮಾಡಿರುವುದಷ್ಟೇ ಅಲ್ಲ; ಶಿಕ್ಷಕರನ್ನು ಸಜ್ಜುಗೊಳಿಸುವ ವಿಧಿ ವಿಧಾನಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಬೇಕಾದ ತುರ್ತನ್ನು ಮನಗಾಣಿಸಿದೆ.
ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಪರೀಕ್ಷೆಯಲ್ಲಿ ನಪಾಸು ಆಗುವವವರು ಎಲ್ಲಿ ಹೋಗುತ್ತಾರೆ? ಇವರಲ್ಲಿ ಬಹುತೇಕರು ಉದ್ಯೋಗಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮೊರೆ ಹೋಗುತ್ತಾರೆ. ಅರ್ಹತೆ ಕಡಿಮೆ ಇರುವವರ ಚೌಕಾಸಿ ಸಾಮರ್ಥ್ಯ‌ ಬಲಹೀನವಾಗಿರುವುದರಿಂದ ಕಡಿಮೆ ಸಂಬಳ, ಸೌಲಭ್ಯವನ್ನು ಅವರು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಕೆಲವು ಪ್ರತಿಷ್ಠಿತ ವಿದ್ಯಾಸಂಸ್ಥೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಖಾಸಗಿ ಶಾಲೆಗಳು ಸೆಳೆದುಕೊಳ್ಳುತ್ತಿರುವುದು ಇಂಥ ಶಿಕ್ಷಕರನ್ನು ಎಂಬುದನ್ನು ಗಮನಿಸಬೇಕು. ಈ ಅಂಶ ಖಾಸಗಿ ಶಾಲೆಗಳ ಕುರಿತು ಜನಸಾಮಾನ್ಯರಲ್ಲಿ ಆಳವಾಗಿ ಬೇರೂರಿರುವ ನಂಬಿಕೆಗಳನ್ನು ಮರು ಪರಿಶೀಲಿಸುವ ಅಗತ್ಯವನ್ನು ಒತ್ತಿಹೇಳುತ್ತದೆ.
'ಖಾಸಗಿ ಶಾಲೆಗಳಲ್ಲಿ ಪ್ರತಿಭಾಶಾಲಿ ಶಿಕ್ಷಕರಿದ್ದಾರೆ. ಅವರು ನಮ್ಮ ಮಕ್ಕಳಿಗೆ ಎಲ್ಲವನ್ನೂ ಅತ್ಯುತ್ತಮವಾಗಿ ಕಲಿಸುತ್ತಾರೆ' ಎನ್ನುವ ಪಾಲಕರ ನಂಬಿಕೆಗೆ ಬಲವಾದ ನೆಲೆಗಟ್ಟೇ ಇಲ್ಲ. ಆದರೆ ಖಾಸಗಿ ಶಾಲೆಗಳಲ್ಲಿ ಏನನ್ನೇ ಕಲಿಸಿಕೊಡಲಿ ಅಲ್ಲಿ ಎಲ್ಲದರ ಮೇಲೆ ನಿಗಾ ಇಡುವ ವ್ಯವಸ್ಥೆ ಇದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಇನ್ನು ಇಲ್ಲಿ ಕಾಲ ಕಾಲಕ್ಕೆ ಶಿಕ್ಷಕರನ್ನು ವಿವಿಧ ಬಗೆಯ ತರಬೇತಿಗಳಿಗೆ ಒಳಪಡಿಸಿ ಅವರ ಮಟ್ಟವನ್ನು ಎತ್ತರಿಸುವ, ಶೈಕ್ಷಣಿಕ ಸಂಪನ್ಮೂಲಗಳನ್ನು ಸಂಪನ್ನಗೊಳಿಸುವ ಪ್ರಯತ್ನಗಳು ನಡೆಸುತ್ತೇವೆ ಎಂದು ಖಾಸಗಿ ಆಡಳಿತ ಮಂಡಳಿಗಳು ಹೇಳಿಕೊಂಡರೂ ಅದೇನು ವ್ಯಾಪಕ ಪ್ರಮಾಣದಲ್ಲಿ ಇಲ್ಲ.
ಇದಕ್ಕೆ ಪರ್ಯಾಯವಾಗಿ ಸರಕಾರಿ ಶಾಲೆಗಳಲ್ಲಿ ಟಿಇಟಿ ಪಾಸು ಮಾಡಿದ ಅರ್ಹ ಶಿಕ್ಷಕರಿದ್ದಾರೆ. ಆದರೆ ಅವರಿಗೆ ತಮ್ಮ ಕೆಲಸದಲ್ಲಿ ಆಳವಾಗಿ ತೊಡಗಿಕೊಳ್ಳುವ ಪ್ರೇರಣೆಯಾಗಲಿ, ಪರಿಸರವಾಗಲಿ ಇಲ್ಲ. ಇದರೊಂದಿಗೆ ಕಲಿಸುವ ಮುಖ್ಯ ಕರ್ತವ್ಯವನ್ನು ಬಿಟ್ಟು ಉಳಿದೆಲ್ಲ ಜವಾಬ್ದಾರಿಗಳನ್ನು ಅವರ ಮೇಲೆ ಎತ್ತಿ ಹಾಕಲಾಗಿದೆ. ಅಕ್ಷ ರ ದಾಸೋಹ, ಗೈರು ಹಾಜರಾತಿ ಆಂದೋಲನ, ಶಾಲಾ ಕಟ್ಟಡ ನಿರ್ಮಾಣ, ಸಮುದಾಯದತ್ತ ಶಾಲೆ, ಜನಗಣತಿ, ಆರ್ಥಿಕ ಗಣತಿ, ಕಬ್ಬಿಣಾಂಶ ಹೊಂದಿರುವ ಗುಳಿಗೆಗಳ ವಿತರಣೆ, ಮತದಾರರ ಪಟ್ಟಿ ಪರಿಷ್ಕರಣೆ - ಹೀಗೆ ಪಟ್ಟಿ ಬೆಳೆಯುತ್ತ ಸಾಗುತ್ತದೆ. ಇಂಥ ಚಟುವಟಿಕೆಗಳು ಅವರ ಉತ್ಸಾಹವನ್ನು ಕುಗ್ಗಿಸುತ್ತವೆ. ಇದಲ್ಲದೆ ಒಮ್ಮೆ ಶಿಕ್ಷಕರಾಗಿ ಅರ್ಹತೆ ಗಳಿಸಿ ಉದ್ಯೋಗ ಗಿಟ್ಟಿಸಿದ ನಂತರ ತಾವೇನೂ ಕಲಿಯುವ ಅಗತ್ಯವಿಲ್ಲ ಎನ್ನುವ ಮನೋಭಾವ ಕೂಡ ಶಿಕ್ಷಕರಲ್ಲಿ ಮನೆ ಮಾಡಿದೆ. ಹೀಗಾಗಿ ಒಂದು ಬಗೆಯ ಜಡತೆ ಸರಕಾರಿ ಶಿಕ್ಷಕರಲ್ಲಿ ಮಡುಗಟ್ಟಿದೆ.
ಇದನ್ನು ಹೋಗಲಾಡಿಸಬೇಕು ಎಂದರೆ ಶಿಕ್ಷಕರ ಅರ್ಹತೆ ಮತ್ತು ಅನರ್ಹತೆಯನ್ನು ವೈಯಕ್ತಿಕ ನೆಲೆಯಲ್ಲಿ ನೋಡಬಾರದು. ಇಷ್ಟೊಂದು ಮಂದಿ ಅನರ್ಹರಾಗುತ್ತಿದ್ದಾರೆ ಎಂದರೆ ಅದು ಒಟ್ಟಾರೆ ವ್ಯವಸ್ಥೆಯಲ್ಲೇ ಏನೋ ದೋಷವಿದೆ ಎಂಬುದನ್ನು ಮನಗಾಣಬೇಕು. ಶಿಕ್ಷಕರ ತರಬೇತಿ ಕೋರ್ಸ್‌ಗಳನ್ನು ಸಮೂಲವಾಗಿ ಬದಲಾಯಿಸಬೇಕು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023