ಅಗ್ನಿ-4 ಕ್ಷಿಪಣಿ ಪರೀಕ್ಷೆ ಯಶಸ್ವಿ ಸೇನೆಗೆ ಮತ್ತೊಂದು ಪ್ರಬಲ ಅಸ್ತ್ರ



ಬಾಲಸೋರ್, ಜ. ೨- ಇಂದು ನಡೆದ ಅಗ್ನಿ-4 ಕ್ಷಿಪಣಿಯ ಉಡಾವಣೆ ಯಶಸ್ವಿಯಾಗಿದೆ. ಇದು ಇದರ ನಾಲ್ಕನೇ ಹಾಗೂ ಅಂತಿಮ ಉಡಾವಣೆ ಪರೀಕ್ಷೆಯಾಗಿದ್ದು, ಇಂದು ಇದರ ಯಶಸ್ವಿನಿಂದ ಭಾರತೀಯ ಸೇನಾ ಬತ್ತಳಿಕೆಗೆ ಇನ್ನೊಂದು ಪ್ರಬಲ ಅಗ್ನಿ ಅಸ್ತ್ರ ಸೇರಲಿದೆ.
ಒಡಿಶಾದ ಬಾಲಸೋರ್ ನಲ್ಲಿರುವ ಡಾ.ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿರುವ ಉಡಾವಣಾ ಕೇಂದ್ರದಲ್ಲಿ ಕ್ಷಿಪಣಿಯನ್ನು ಇಂದು ಬೆಳಗ್ಗೆ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು. ಭಾರತೀಯ ಸೇನೆ ನಡೆಸಿದ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಅಗ್ನಿ-4 ಕ್ಷಿಪಣಿ ಉಡಾವಣೆಗೊಂಡ ಕೇವಲ 20 ನಿಮಿಷದಲ್ಲಿ 800 ಕಿ.ಮೀ ದೂರ ಕ್ರಮಿಸಿ ನಿಖರ ಗುರಿ ತಲುಪುವ ಮೂಲಕ ಯಶಸ್ವಿಯಾಯಿತು.
ಅಗ್ನಿ-4 ಕ್ಷಿಪಣಿ ಘನ ಇಂಧನ ಬಳಕೆ ಮಾಡುವ ಇಂಜಿನ್ ಹೊಂದಿದ್ದು, ಕ್ಷಿಪಣಿ ಉಡಾವಣೆಗೆ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಮೊಬೈಲ್ ಲಾಂಚರ್ ಮೂಲಕ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು.
ಭೂಮಿಯ ಮೇಲ್ಮೈನಿಂದ ಮೇಲ್ಮೈಗೆ ಹಾರುವ ಈ ಖಂಡಾಂತರ ಕ್ಷಿಪಣಿಯನ್ನು ನಾಲ್ಕನೇ ಬಾರಿಗೆ ಭಾರತೀಯ ಸೇನೆ ಪ್ರಯೋಗಕ್ಕೆ ಒಳಪಡಿಸಿದ್ದು, ಇದು ಈ ಕ್ಷಿಪಣಿಯ ಅಂತಿಯ ಪ್ರಯೋಗವಾಗಿದೆ.
ಅಗ್ನಿ-4 ಕ್ಷಿಪಣಿಯು ಸುಮಾರು 17 ಟನ್ ತೂಕವಿದ್ದು, 20 ಮೀಟರ್ ಉದ್ದವಿದೆ. ಸುಮಾರು 4 ಸಾವಿರ ಕಿಮೀ ವ್ಯಾಪ್ತಿಯಲ್ಲಿನ ಯಾವುದೇ ಕಠಿಣ ಗುರಿಯನ್ನು ಕ್ಷಣಮಾತ್ರದಲ್ಲಿ ಛಿದ್ರ ಮಾಡಬಲ್ಲ ತಾಕತ್ತು ಈ ಕ್ಷಿಪಣಿಗಿದೆ.
ಕೇವಲ ಒಂದು ವಾರದ ಹಿಂದೆಯಷ್ಟೇ ಭಾರತ ತನ್ನ ಪ್ರಬಲ ಅಗ್ನಿ 5 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಅಗ್ನಿ 5 ಕ್ಷಿಪಣಿ ಉಡಾವಣೆ ಸಂಬಂಧ ಕ್ಯಾತೆ ತೆಗೆದಿದ್ದ ಚೀನಾ ವಿಶ್ವಸಂಸ್ಥೆಯಲ್ಲಿ ದೂರು ದಾಖಲಿಸಿತ್ತು. ಆದರೀಗ ಚೀನಾ ಕ್ಯಾತೆಗೆ ತನ್ನ ಕಾರ್ಯದಿಂದಲೇ ಭಾರತ ಉತ್ತರ ನೀಡಿದ್ದು, ಮತ್ತೊಂದು ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಚೀನಾ ದೇಶಕ್ಕೆ ತಿರುಗೇಟು ನೀಡಿದೆ.

Comments

Popular posts from this blog

ಶಿಕ್ಷಕರ ಸೇವಾ ಪ್ರಮಾಣ ಪತ್ರ.

NMMS 2019 PAPER-1, ಮಾನಸಿಕ ಸಾಮರ್ಥ್ಯ ಪರೀಕ್ಷೆ (GMAT)