ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ಅವರು ಪ್ರಸಕ್ತ ಸಾಲಿನ ‘ಸಿ.ಕೆ . ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.:-
ಕಿರ್ಮಾನಿಗೆ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ 24 Dec, 2015 ನವದೆಹಲಿ(ಪಿಟಿಐ): ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ಅವರು ಪ್ರಸಕ್ತ ಸಾಲಿನ 'ಸಿ.ಕೆ . ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್, ಕಾರ್ಯದರ್ಶಿ ಅನುರಾಗ್ ಠಾಕೂರ್ ಹಾಗೂ ದ ಹಿಂದೂ ಪತ್ರಿಕೆಯ ಸಂಪಾದಕ ಎನ್. ರಾಮ್ ಅವರನ್ನು ಒಳಗೊಂಡಿದ್ದ ಪ್ರಶಸ್ತಿ ಆಯ್ಕೆ ಸಮಿತಿ, ಮುಂಬೈನಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಗುರುವಾರ ಸಭೆ ಸೇರಿತ್ತು. ಸಭೆಯಲ್ಲಿ ನಾಯ್ಡು ವಾರ್ಷಿಕ ಪ್ರಶಸ್ತಿಗೆ ಕಿರ್ಮಾನಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿತು ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತ ಟೆಸ್ಟ್ ಕ್ರಿಕೆಟ್ ತಂಡದ ಮೊದಲ ನಾಯಕ ಕರ್ನಲ್ ಕೊಠಾರಿ ಕನಕಯ್ಯ ನಾಯ್ಡು ಅವರ ಜನ್ಮದಿನದ ಸ್ಮರಣಾರ್ಥ, ಕ್ರಿಕೆಟ್ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಒಬ್ಬರಿಗೆ ವರ್ಷಂಪ್ರತಿ ಜೀವಮಾನ ಸಾಧನೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯು ಒಂದು ಟ್ರೋಫಿ, ಪ್ರಮಾಣಪತ್ರ ಹಾಗೂ 25 ಲಕ್ಷ ರೂಪಾಯಿಯ ಚೆಕ್ ಒಳಗೊಂಡಿರುತ್ತದೆ.